ಈ ಸಾವು ನ್ಯಾಯವೇ?

akumar's picture
Tagged:  

"ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಕೀಳ್ಯಾವುದೋ ಹುಟ್ಟಿ ಸಾಯುವ ಹಾಳು ಮನುಸಾ ಮನುಸಾನ ಮಧ್ಯ ಕೀಳ್ಯಾವ್ದು ಮೇಲ್ಯಾವುದೋ" ಸತ್ಯ ಹರಿಶ್ಚಂದ್ರ ಚಿತ್ರದಈ ಹಾಡನ್ನು ಮರೆಯಲು ಸಾಧ್ಯವೇ? ವೀರಬಾಹುವಿನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದ ನಟ ಎಂ. ಪಿ.ಶಂಕರ್ ಇಂದು ನಮ್ಮನಗಲಿದ್ದಾರೆ. ಕಳೆದ ಕೆಲವು ದಿನಗಳಿಂದ ಮೇದೋಜೀರಕಾಂಗದ ಕ್ಯಾನ್ಸರ್ (Pancreas cancer) ತೀವ್ರ ಅನಾರೋಗ್ಯ ಪೀಡಿತರಾಗಿದ್ದ ಶಂಕರ್ ಮೈಸೂರಿನ ತಮ್ಮ ಸ್ವಗೃಹದಲ್ಲಿ ಗುರುವಾರ (ಜುಲೈ 1೭) ರಂದು ವಿಧಿವಶರಾದರು.

mps

ಸತ್ಯ ಹರಿಶ್ಚಂದ್ರ ಚಿತ್ರದ ವೀರಬಾಹುವಿನ ಪಾತ್ರ ಎಂ.ಪಿ.ಶಂಕರ್ ಚಿತ್ರ ರಸಿಕರ ಮನದಾಳದಲ್ಲಿ ಸದಾ ನೆಲೆಸುವಂತೆ ಮಾಡಿತು. ರತ್ನಮಂಜರಿ, ನಾರದ ವಿಜಯ, ಭೂತಯ್ಯನ ಮಗ ಅಯ್ಯು, ಗಂಗೆ ಗೌರಿ, ಗಂಧದ ಗುಡಿ, ಬಂಗಾರದ ಮನುಷ್ಯ ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಭೂತಯ್ಯನ ಮಗ ಅಯ್ಯು ಚಿತ್ರದ ಭೂತಯ್ಯನ ಪಾತ್ರ ಕೂಡ ಅದ್ಭುತವಾದ ಪಾತ್ರ!. ಖಳ ಪಾತ್ರ ಮತ್ತು ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ ಪ್ರತಿಭಾವಂತ ನಟ. ಹಲವು ಚಿತ್ರಗಳ ನಿರ್ಮಾಣಕ್ಕೂ ಶಂಕರ್ ಕೈ ಹಾಕಿದ್ದರು.ವನ್ಯ ಜೀವಿಗಳಿಗೆ ಸಂಬಂಧಿಸಿ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಮಾಲಾಶ್ರೀ, ದ್ವಾರಕೀಶ್ ಜೊತೆ ತಾವೂ ನಟಿಸಿದ್ದ "ಗಿಡ್ಡೂ ದಾದಾ" ಇವರೇ ನಿರ್ದೇಶಿಸಿದ ಚಿತ್ರ.

ಎಂ.ಪಿ.ಶಂಕರ್ ನಿಧನದಿಂದ ಕನ್ನಡ ಚಿತ್ರರಂಗದ ಮತ್ತೊಂದು ಹಳೆಯ ಕೊಂಡಿ ಕಳಚಿಕೊಂಡಿದೆ. ಮತ್ತೋರ್ವ ಅದ್ಭುತ, ಸಹೃದಯಿ ನಟರೊಬ್ಬರು ನೇಪಥ್ಯಕ್ಕೆ ಸರಿದಿದ್ದಾರೆ.

ಇವರೇ ಅಭಿನಯಿಸಿದ "ಕುಲದಲ್ಲಿ ಕೀಳ್ಯಾವುದೋ" ಹಾಡಿನ ಕೊನೆಯಲ್ಲಿ "ಮಸಣದಲ್ಲಿ ಈ ವೀರಬಾಹುವ ಕೈಯ ಕೆಳಗಡೆ ಬೂದಿಯಾದರು" ಎಂಬ ಸಾಲುಗಳನ್ನು ನೆನೆಸಿಕೊಂಡರೆ ಈ ಜಗತ್ತು ಎಷ್ಟೊಂದು ನಶ್ವರ ಇಲ್ಲಿ ಯಾರೂ ಶಾಶ್ವತರಲ್ಲ ಎಂಬ ಕಠೋರ ಸತ್ಯದ ದರ್ಶನ ಮಗದೊಮ್ಮೆ ಆಗುತ್ತದೆ...